ಕಳೆದ ವರ್ಷ ಈ ದಿನ ಸುಶಾಂತ್, ಈ ವರ್ಷ ಸಂಚಾರಿ ವಿಜಯ್ ; ಪ್ರತಿಭಾನ್ವಿತ ನಟರಿಗೆ ಅಭಿಮಾನಿಗಳ ಕಂಬನಿ

14-06-21 04:36 pm       Source: Public Tv Kannada   ಸಿನಿಮಾ

ಕಾಕತಾಳೀಯವೆಂಬಂತೆ ಒಂದೇ ವರ್ಷದ ಅಂತರದಲ್ಲಿ ಇಬ್ಬರು ಪ್ರತಿಭಾನ್ವಿತ ನಟರು ಒಂದೇ ದಿನದಂದು ಮೃತಪಟ್ಟಿರುವುದರ ಬಗ್ಗೆ ಇದೀಗ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 

ಬೆಂಗಳೂರು, ಜೂನ್ 14: ಕಳೆದ ವರ್ಷ ಜೂನ್ 14ರಂದು ಬಾಲಿವುಡ್‍ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿ ಪ್ರಕಟವಾಗಿದ್ದರೆ, ಇಂದು ಸಂಚಾರಿ ವಿಜಯ್ ಅಪಘಾತಕ್ಕೀಡಾಗಿ ನಿಧನಹೊಂದಿದ್ದಾರೆ. ಈ ಮೂಲಕ ಇಬ್ಬರು ಪ್ರತಿಭಾನ್ವಿತ ನಟರು ಒಂದು ವರ್ಷದಲ್ಲಿ ಕಲಾ ಬದುಕಿನಿಂದ ದೂರವಾಗಿದ್ದಾರೆ.

ಕಾಕತಾಳೀಯವೆಂಬಂತೆ ಒಂದೇ ವರ್ಷದ ಅಂತರದಲ್ಲಿ ಇಬ್ಬರು ಪ್ರತಿಭಾನ್ವಿತ ನಟರು ಒಂದೇ ದಿನದಂದು ಮೃತಪಟ್ಟಿರುವುದರ ಬಗ್ಗೆ ಇದೀಗ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 

ಸಂಚಾರಿ ವಿಜಯ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಸ್ಯಾಂಡಲ್‍ವುಡ್ ನಟ-ನಟಿಯರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಮಂದಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕಂಬನಿ ಮಿಡಿದಿದ್ದಾರೆ.

ಸಂಚಾರಿ ವಿಜಯ್ ಅವರ ನಿಧನಕ್ಕೆ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ ಆರೋಗ್ಯ ಸಚಿವರಾದ ಡಾ. ಸುಧಾಕರ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ, ಅಪರೂಪದ ಪ್ರತಿಭೆ ಜೊತೆಗೆ ಸಹೃದಯೀ ವ್ಯಕ್ತಿಯೂ ಆಗಿದ್ದ ಸಂಚಾರಿ ವಿಜಯ್ ಅವರ ನಿಧನದಿಂದ ಕನ್ನಡ ರಂಗಭೂಮಿ ಹಾಗೂ ಚಿತ್ರರಂಗ ಓರ್ವ ಭರವಸೆಯ ಯುವ ಕಲಾವಿದನನ್ನು ಕಳೆದುಕೊಂಡಿದೆ. ತಮ್ಮ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಅವರಿಗೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. 

ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್‍ನಲ್ಲಿ ಹೊಸ ಬಗೆಯ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದರು. ಖ್ಯಾತ ಕ್ರಿಕೆಟಿಗ ಎಂ.ಎಸ್ ಧೋನಿ ಅವರ ಬಯೋಪಿಕ್‍ನಲ್ಲಿ ಅದ್ಭುತ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದ ಸುಶಾಂತ್, 2020 ಜೂನ್ 14 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಇಬ್ಬರು ಚಿತ್ರರಂಗದಲ್ಲಿ ಇನ್ನಷ್ಟೂ ಸಾಧನೆ ಮಾಡುವ ಹೊತ್ತಿನಲ್ಲಿ ವಿಧಿಯ ಬರಹಕ್ಕೆ ಬಲಿಯಾಗಿದ್ದಾರೆ.

(Kannada Copy of Public TV)