ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಮೆಗಾಸ್ಟಾರ್ ಚಿರಂಜೀವಿ

21-08-21 12:22 pm       Filmbeat: Shruthi GK   ಸಿನಿಮಾ

ಹುಟ್ಟುಹಬ್ಬ ಆಚರಣೆಗೆ ಒಂದು ದಿನಕ್ಕೂ ಮೊದಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುವ ಮೂಲಕ ಪ್ರೀತಿ, ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ತೆಲುಗಿನ ಖ್ಯಾತ ನಟ, ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬಕ್ಕೆ ಇನ್ನೊಂದೆ ದಿನ ಬಾಕಿ ಇದ. ಆಗಸ್ಟ್ 22 ನಟ ಚಿರಂಜೀವಿ ಅವರ ಜನ್ಮದಿನ. ಸ್ಟಾರ್ ಕಲಾವಿದರ ಹುಟ್ಟುಹಬ್ಬ ಅಂದ್ಮೇಲೆ ಅಭಿಮಾನಿಗಳಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿರುತ್ತೆ. ಚಿರಂಜೀವಿ ಹುಟ್ಟುಹಬ್ಬಕ್ಕೆ ಏನೆಲ್ಲ ವಿಶೇಷತೆ ಇರಲಿದೆ, ಯಾವೆಲ್ಲ ಸರ್ಪ್ರೈಸ್ ಅಭಿಮಾನಿಗಳಿಗೆ ಕಾದಿದೆ ಎನ್ನುವುದು ಸದ್ಯದ ಕುತೂಹಲ.

ಹುಟ್ಟುಹಬ್ಬ ಆಚರಣೆಗೆ ಒಂದು ದಿನಕ್ಕೂ ಮೊದಲೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುವ ಮೂಲಕ ಪ್ರೀತಿ, ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಚಿರಂಜೀವಿ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಈ ವರ್ಷ ಕೂಡ ಚಿರಂಜೀವಿ ಸರಳವಾಗಿ ಕುಟುಂಬದ ಜೊತೆ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ಕಾರಣದಿಂದ ಎಲ್ಲಾ ಸಂಭ್ರಮ, ಅದ್ದೂರಿತನಕ್ಕೆ ಬ್ರೇಕ್ ಬಿದ್ದಿದೆ. ಹಾಗಾಗಿ ಮೆಗಾಸ್ಟಾರ್ ಹುಟ್ಟುಹಬ್ಬ ಸರಳವಾಗಿ ಇರಲಿದೆ ಎನ್ನಲಾಗುತ್ತಿದೆ.

ಇನ್ನು ಹುಟ್ಟುಹಬ್ಬ ಆಚರಣೆಯ ಒಂದು ದಿನ ಮುಂಚೆಯೇ ಚಿರಂಜೀವಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಈ ಬಾರಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಪ್ಲಾನ್ ಮಾಡಿರುವ ಮೆಗಾಸ್ಟಾರ್ ಪರಿಸರ ಕಾಳಜಿ ಮೆರೆದಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಸಿಗಳನ್ನು ನೆಜುವಂತೆ ಕೇಳಿಕೊಂಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿ 3 ಸಿಸಿಗಳನ್ನು ನೆಟ್ಟು ಟ್ಯಾಗ್ ಮಾಡಿ ಎಂದು ಹೇಳಿದ್ದಾರೆ. ಈ ಬಗ್ಗೆ ಮೆಗಾಸ್ಟಾರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.



"ನಾವೆಲ್ಲರೂ ಪ್ರಕೃತಿ ತಾಯಿಗೆ ಋಣಿಯಾಗಿದ್ದೇವೆ. ಹವಮಾನ ಬದಲಾವಣೆ, ವಾಯು ಮಾಲಿನ್ಯ ವಿರುದ್ಧ ಹೋರಾಡಲು ಸಸಿಗಳನ್ನು ನೆಡೋಣ ಮತ್ತು ಮರಗಳನ್ನು ಬೆಳೆಸೋಣ. ಈ ವರ್ಷ ನನ್ನ ಹುಟ್ಟುಹಬ್ಬದಂದು ಪ್ರೀತಿಯ ಅಭಿಮಾನಿಗಳಿಗೆ 3 ಸಸಿಗಳನ್ನು ನೆಡುವಂತೆ ಮನವಿ ಮಾಡಿಕೊಳ್ಳುತ್ತೇನೆ. #HaraHaiTohBharaHai ಟ್ಯಾಗ್ ಮಾಡಿ. ಗೋಗ್ರೀನ್ ಅಭಿಯಾನವನ್ನು ಬೆಂಬಲಿಸೋಣ" ಎಂದು ಮೆಗಾಸ್ಟಾರ್ ಬರೆದುಕೊಂಡಿದ್ದಾರೆ.

ಚಿರಂಜೀವಿ ಮಾತಿಗೆ ಅನೇಕ ಅಭಿಮಾನಿಗಳು ಕಾಮೆಂಟ್ ಮಾಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜೊತೆ ಮುಂಚಿತವಾಗಿಯೇ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಚಿರಂಜೀವಿ ಹುಟ್ಟುಹಬ್ಬ ಆಚರಣೆಗೂ ಮೊದಲು ಇಂದು (ಆಗಸ್ಟ್ 21) ಚಿರಂಜೀವಿ ಮುಂದಿನ ಸಿನಿಮಾದ ಬಗ್ಗೆ ಅಪ್ ಡೇಟ್ ನೀಡುವುದಾಗಿ ಸಿನಿಮಾತಂಡ ಘೋಷಣೆ ಮಾಡಿದೆ. ಇಂದು ಸಂಜೆ 5 ಗಂಟೆಗೆ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗವಾಗಲಿದೆ.

ಅಂದಹಾಗೆ ಚಿರಂಜೀವಿ ಮುಂದಿನ ಸಿನಿಮಾ ಮಲಯಾಳಂನ ಸೂಪರ್ ಹಿಟ್ ಲೂಸಿಫರ್ ರಿಮೇಕ್. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಚಿತ್ರೀಕರಣ ಪ್ರಾರಂಭ ಮಾಡಲು ಸಜ್ಜಾಗಿದೆ ಚಿತ್ರತಂಡ. ಸದ್ಯ ಚಿತ್ರಕ್ಕೆ ಗಾಡ್ ಫಾದರ್ ಎಂದು ಟೈಟಲ್ ಇಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇನ್ನು ಅಧಿಕೃತವಾಗಿಲ್ಲ. ಇಂದು ಹೊರಬೀಳುವ ಅಪ್ ಡೇಟ್ ನಲ್ಲಿ ಟೈಟಲ್ ಮತ್ತು ಫಸ್ಟ್ ಲುಕ್ ರಿವೀಲ್ ಆಗುವ ಸಾಧ್ಯತೆ ಇದೆ.



ಇತ್ತೀಚಿಗೆ ತೆಲುಗಿನ ಹುಟ್ಟುಹಬ್ಬ ಆಚರಿಸಿಕೊಂಡ ಮತ್ತೋರ್ವ ಸ್ಟಾರ್ ನಟ ಮಹೇಶ್ ಬಾಬು ಕೂಡ ಗೋಗ್ರೀನ್ ಚಾಲೆಂಜ್ ಮಾಡಿದ್ದರು. ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಲ್ಲಿ ಸಸಿನಡುವಂತೆ ಮನವಿ ಮಾಡಿದ್ದರು. ಇದೀಗ ಚಿರಂಜೀವಿ ಕೂಡ ಅಭಿಮಾನಿಗಳಲ್ಲಿ ಅದೇ ಮನವಿ ಮಾಡಿದ್ದು, ಈ ಮೂಲಕ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.

(Kannada Copy of Filmbeat Kannada)