ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ನಿಧನ

10-10-21 12:01 pm       Headline Karnataka News Network   ಸಿನಿಮಾ

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ನಿಧನ

ಬೆಂಗಳೂರು, ಅ.10 : ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ನಿಧನ ಹೊಂದಿದ್ದಾರೆ. ಕೆಲ ವರ್ಷಗಳಿಂದಲೂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕೆಲವು ದಿನಗಳ ಹಿಂದಷ್ಟೆ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆಗೆ ಸ್ಪಂದಿಸದ ಸತ್ಯಜಿತ್ ಅಕ್ಟೋಬರ್ 09ರ ರಾತ್ರಿ ನಿಧನ ಹೊಂದಿದ್ದಾರೆ.

ಹೆಗಡೆನಗರದಲ್ಲಿರುವ ಸತ್ಯಜಿತ್ ನಿವಾಸದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಇಸ್ಲಾಂ ಸಂಪ್ರದಾಯದಂತೆ ಅಂತಿಮಕ್ರಿಯೆ ಮಾಡಲಾಗುವುದು.

ಸತ್ಯಜಿತ್ ಸುಮಾರು 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಂಪು ಉರಿಕಂಗಳ ಸತ್ಯಜಿತ್ ಹಲವಾರು ಸಿನಿಮಾಗಳಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ.

ವೃತ್ತಿಯಲ್ಲಿ ಬಸ್ ಚಾಲಕ ಆಗಿದ್ದ ಸತ್ಯಜಿತ್‌ ನಾಟಕಗಳಲ್ಲಿ ಆಸಕ್ತಿ ಅರಳಿ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಅದೇ ಮುಂದುವರೆದು ಸಿನಿಮಾಗಳಿಗೂ ಪ್ರವೇಶ ಪಡೆದುಕೊಂಡರು. ಆ ನಂತರ ಬೇರೆ ವೃತ್ತಿಯ ಕಡೆ ಗಮನ ಹರಿಸದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು.

ಹಿಂದಿಯಲ್ಲಿ ನಾಟಕ ಮಾಡುವಾಗ ನಾನಾ ಪಾಟೇಕರ್ ಸಹ ಸತ್ಯಜಿತ್‌ಗೆ ಗೆಳೆಯರಾಗಿದ್ದರು. ಸತ್ಯಜಿತ್ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸತ್ಯಜಿತ್ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್ ಎಂದಿದ್ದು, ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಬಳಿಕ ತಮ್ಮ ಹೆಸರನ್ನು ಬದಲಾಯಿಸಿಕೊಂಡರು.

1986ರಲ್ಲಿ ಬಿಡುಗಡೆಯಾದ ‘ಅಂಕುಶ್‌’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಮುಂದೆ ಮೈಸೂರು ಜಾಣ (1992) ಅವರಿಗೆ ಚಂದನವನದಲ್ಲಿ ನೆಲೆಯೂರಲು ಬ್ರೇಕ್‌ ಕೊಟ್ಟ ಸಿನಿಮಾ. ‘ಪುಟ್ನಂಜ’, ‘ಶಿವಮೆಚ್ಚಿದ ಕಣ್ಣಪ್ಪ’, ‘ಚೈತ್ರದ ಪ್ರೇಮಾಂಜಲಿ’, ‘ಆಪ್ತಮಿತ್ರ’ ಚಿತ್ರದ ಪಾತ್ರಗಳು ಜನಮಾನಸದಲ್ಲಿ ಇನ್ನೂ ನೆನಪಿವೆ. 600ಕ್ಕೂ ಅಧಿಕ ಸಿನಿಮಾಗಳಲ್ಲಿ ಸತ್ಯಜಿತ್‌ ನಟಿಸಿದ್ದಾರೆ.

ಸತ್ಯಜಿತ್ ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ಯಾಂಗ್ರಿನ್ ಆಗಿ ಅವರ ಒಂದು ಕಾಲನ್ನು ವೈದ್ಯರು ತೆಗೆದು ಹಾಕಿದರು. ಅದಾದ ಮೇಲೂ ಸಕ್ಕರೆ ಖಾಯಿಲೆ ಹಾಗೂ ಇತರ ಖಾಯಿಲೆಗಳು ಅವರ ಬೆನ್ನು ಬಿಡಲಿಲ್ಲ. ಇದರ ಜೊತೆಗೆ ಕೌಟುಂಬಿಕ ಸಮಸ್ಯೆಗಳು ಸಹ ಬೆನ್ನು ಬಿದ್ದವು, ಕಳೆದ ಲಾಕ್‌ಡೌನ್ ಅವಧಿಯಲ್ಲಿ ಸ್ವಂತ ಮಗಳೇ ಸತ್ಯಜಿತ್ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

Sandalwood actor sathyajith is no more. He was admitted to the city's Bouring Hospital a few days ago after being seriously ill.