Ramesh Rai, BJP, Puttur, Mangalore: ಪುತ್ತೂರು ನಗರಸಭೆ ಬಿಜೆಪಿ ಸದಸ್ಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ; ಚಪ್ಪಲಿ, ಮೊಬೈಲ್, ಅಂಗಿ ತೆಗೆದಿಟ್ಟು ಸಾವಿಗೆ ಶರಣು ! 

05-06-25 06:00 pm       Mangaluru Staff   ಕರಾವಳಿ

ಪುತ್ತೂರು ನಗರಸಭೆಯ ಬಿಜೆಪಿ ಸದಸ್ಯ ರಮೇಶ್ ರೈ (55) ಪಾಣೆಮಂಗಳೂರು ಸೇತುವೆ ಬಳಿಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಬಂಟ್ವಾಳ, ಜೂನ್ 5: ಪುತ್ತೂರು ನಗರಸಭೆಯ ಬಿಜೆಪಿ ಸದಸ್ಯ ರಮೇಶ್ ರೈ (55) ಪಾಣೆಮಂಗಳೂರು ಸೇತುವೆ ಬಳಿಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಪಾಣೆಮಂಗಳೂರು ನೇತ್ರಾವತಿ ಸೇತುವೆ ಬಳಿಯಲ್ಲಿ ಇಂದು ಬೆಳಗ್ಗೆ 11 ಗಂಟೆ ವೇಳೆಗೆ ರಮೇಶ್ ರೈ ಅವರಿಗೆ ಸೇರಿದ್ದ ಬೈಕ್ ಮತ್ತು ಮೊಬೈಲ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ, ಪೋಲೀಸ್ ಮತ್ತು ಸ್ಥಳೀಯರು ಸ್ಥಳದಲ್ಲಿ ಹುಡುಕಾಟ ನಡೆಸಿದ್ದರು. ಪಾಣೆಮಗಳೂರಿನ ಸೇತುವೆ ಬಳಿಯ ನೀರಿನ ಟ್ಯಾಂಕಿಯಲ್ಲಿ ರಮೇಶ್ ರೈ ಅವರ ಮೃತದೇಹ ಮಧ್ಯಾಹ್ನ ಪತ್ತೆಯಾಗಿದೆ. 

ಇತ್ತೀಚಿಗೆ ನಗರಸಭೆ ನೆಲ್ಲಿಕಟ್ಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ರೈ ಆಯ್ಕೆಯಾಗಿದ್ದರು. ಇವರು ತನ್ನ ಚಪ್ಪಲಿ, ಮೊಬೈಲ್, ಅಂಗಿ ತೆಗೆದಿಟ್ಟು ನಾಪತ್ತೆಯಾಗಿದ್ದರು. ಇದರಿಂದಾಗಿ ಈ ಸೊತ್ತು ರಮೇಶ್ ರೈಯವರದ್ದೇ ಅನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.

ಆತ್ಮಹತ್ಯೆ ಮಾಹಿತಿ ತಿಳಿಯುತ್ತಿದ್ದಂತೆ ಪುತ್ತೂರಿನಿಂದ ಬಿಜೆಪಿ ಪಕ್ಷದ ಮುಖಂಡರು ಮತ್ತು ಸಂಬಂಧಿಕರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಮೇಶ್ ರೈ ಅವರು ಪತ್ನಿ ಮೋಹಿನಿ, ಪುತ್ರ ವಿನೀಶ್, ಪುತ್ರಿ ವೀಕ್ಷಾ ಅವರನ್ನು ಅಗಲಿದ್ದಾರೆ. ಸುಳ್ಯದಲ್ಲಿ ಮಂಗಳಾ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದ ರಮೇಶ್ ರೈ ದಿಢೀರ್ ಸಾವಿಗೇನು ಕಾರಣ ಎನ್ನುವುದು ಗೊತ್ತಾಗಿಲ್ಲ. ಬಂಟ್ವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ramesh Rai (55), a BJP councillor from Puttur Municipality, was found dead in the Nethravathi River near Panemangalore Bridge today. His bike, mobile phone, slippers, and shirt were discovered on the bridge around 11 AM, prompting a search operation by police and fire personnel. His body was later recovered from a nearby water tank.