ಆರೆಸ್ಸೆಸ್ ಮುಖಂಡನ ಸೋಗಿನಲ್ಲಿ ಕೋಟಿಗಟ್ಟಲೆ ವಂಚಿಸಿದ ಯುವರಾಜನಿಗೆ ಖ್ಯಾತ ನಟಿ ಜೊತೆ ಲಿಂಕ್ ?!

06-01-21 12:32 pm       Headline Karnataka News Network   ಸಿನಿಮಾ

ಯುವರಾಜ್ ಸ್ವಾಮಿ ಎಂಬ ವ್ಯಕ್ತಿ ನಮ್ಮ ಕುಟುಂಬಕ್ಕೆ 15 ವರ್ಷದಿಂದ ಪರಿಚಿತರು. ಅವರ ಭವಿಷ್ಯವನ್ನು ನಮ್ಮ ತಂದೆ-ತಾಯಿ ಹೆಚ್ಚು ನಂಬುತ್ತಿದ್ದರು.

ಬೆಂಗಳೂರು, ಜ.6: ಆರೆಸ್ಸೆಸ್ ಮುಖಂಡನ ಸೋಗಿನಲ್ಲಿ ದೊಡ್ಡ ಸ್ಥಾನ ಕೊಡಿಸುವ ಆಮಿಷವೊಡ್ಡಿ ಸಿಕ್ಕಿಬಿದ್ದಿರುವ ಯುವರಾಜ್ ಅಲಿಯಾಸ್ ಸ್ವಾಮಿಗೆ ಕನ್ನಡದ ಖ್ಯಾತ ನಟಿ ರಾಧಿಕಾ ಜೊತೆಗೆ ಲಿಂಕ್ ಇರುವ ವಿಚಾರ ಬೆಳಕಿಗೆ ಬಂದಿದೆ. 

ಸಿಸಿಬಿ ಪೊಲೀಸರು ಇತ್ತೀಚೆಗೆ ಯುವರಾಜ್ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ವಿಚಾರಣೆ ವೇಳೆ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಅವರ ಸಹೋದರನ ಖಾತೆಗೆ ಭಾರಿ ಮೊತ್ತದ ಹಣ ವರ್ಗಾವಣೆ ಮಾಡಿರುವ ವಿಚಾರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಹಿನ್ನೆಲೆ ರಾಧಿಕಾ ಮತ್ತು ಸಹೋದರನ ಜೊತೆ ಯುವರಾಜ್ ಸ್ವಾಮಿ ನೇರ ಲಿಂಕ್ ಇಟ್ಟುಕೊಂಡಿರುವ ಅನುಮಾನ ಪೊಲೀಸರಿಗೆ ಶುರುವಾಗಿದೆ. ಈ ಸಂಬಂಧ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಪ್ರತಿಕ್ರಿಯೆ ನೀಡಿದ್ದು, ಆತ ನಮ್ಮ ಕುಟುಂಬಕ್ಕೆ ಪರಿಚಿತ ಅಷ್ಟೇ. ಆದರೆ, ಹಣಕಾಸಿನ ವ್ಯವಹಾರ ಏನೂ ಇಲ್ಲ ಎಂದಿದ್ದಾರೆ.
 


 

ನಮ್ಮ ಕುಟುಂಬಕ್ಕೆ ಸ್ವಾಮೀಜಿಯಾಗಿ ಪರಿಚಿತರು ! 

''ಯುವರಾಜ್ ಸ್ವಾಮಿ ಎಂಬ ವ್ಯಕ್ತಿ ನಮ್ಮ ಕುಟುಂಬಕ್ಕೆ 15 ವರ್ಷದಿಂದ ಪರಿಚಿತರು. ಅವರ ಭವಿಷ್ಯವನ್ನು ನಮ್ಮ ತಂದೆ- ತಾಯಿ ಹೆಚ್ಚು ನಂಬುತ್ತಿದ್ದರು. ನಮ್ಮ ತಂದೆ ಸಾವಿನ ವಿಚಾರದಲ್ಲೂ ಅವರು ಹೇಳಿದ ಭವಿಷ್ಯ ನಿಜವಾಗಿತ್ತು ಎಂದು ತಾಯಿ ಹೇಳಿದ್ದರು. ಹೀಗೆ, ನಮ್ಮ ಕುಟುಂಬಕ್ಕೆ ಪರಿಚಿತರು ಅಷ್ಟೇ. ಇದನ್ನು ಬಿಟ್ಟು ಬೇರೆ ಯಾವುದೇ ರೀತಿಯ ವ್ಯವಹಾರಿಕ ಸಂಬಂಧ ನಮ್ಮ ನಡುವೆ ಇಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ. 

ಸಿಸಿಬಿ ವಿಚಾರಣೆಗೆ ಕರೆದಿದ್ದರು ! 

ಯುವರಾಜ್ ಜೊತೆಗೆ ಸಂಪರ್ಕ ಇಟ್ಟುಕೊಂಡಿರುವುದು ಬಯಲಾಗುತ್ತಲೇ ಸಿಸಿಬಿ ಪೊಲೀಸರು ರವಿರಾಜ್ ಅವರನ್ನು ವಿಚಾರಣೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ರವಿರಾಜ್ ಮಾಹಿತಿ ಹೇಳಿಕೊಂಡಿದ್ದಾರೆ. 'ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಒಂದು ಗಂಟೆ ಕಾಲ ವಿಚಾರಣೆಗೆ ಒಳಪಟ್ಟಿದ್ದೆ'' ಎಂದು ಒಪ್ಪಿಕೊಂಡಿದ್ದಾರೆ. 
 


 

ಬಂಧಿತ ಯುವರಾಜ್ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಹಾಗು ರವಿರಾಜ್ ಇಬ್ಬರಿಗೂ ಹಣ ವರ್ಗಾವಣೆ ಆಗಿದೆ ಎನ್ನಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ರವಿರಾಜ್ ''ನನ್ನ ಖಾತೆಗೆ ಹಣ ವರ್ಗಾವಣೆ ಆಗಿಲ್ಲ, ನನಗೂ ಮತ್ತು ಅವರ ನಡುವೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ನನ್ನ ಸಹೋದರಿ ಕುರಿತು ನನಗೆ ಸದ್ಯಕ್ಕೆ ಮಾಹಿತಿ ಇಲ್ಲ'' ಎಂದು ಹೇಳಿದ್ದಾರೆ. 

ಸದ್ಯ ಬೆಂಗಳೂರಿನಿಂದ ಹೊರಗೆ ಇರುವ ರಾಧಿಕಾ ಕುಮಾರಸ್ವಾಮಿ ಮತ್ತು ರವಿರಾಜ್ ಮಧ್ಯಾಹ್ನದ ಬಳಿಕ ಮನೆಗೆ ಬರಲಿದ್ದಾರೆ. ಆ ನಂತರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ ಎಂದು ರವಿರಾಜ್ ಮಾಹಿತಿ ನೀಡಿದ್ದಾರೆ.