ಆಯುರ್ವೇದದ ಪ್ರಕಾರ ನೀರು ಕುಡಿಯುವ ಸರಿಯಾದ ವಿಧಾನಗಳು

07-02-22 11:04 am       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಆಯುರ್ವೇದ ಶಾಸ್ತ್ರದ ಪ್ರಕಾರ ನೀರು ಕುಡಿಯುವ ಸರಿಯಾದ ವಿಧಾನಗಳು ಇಲ್ಲಿದೆ ನೋಡಿ..

ನಮ್ಮ ದೇಹದ ಮುಕ್ಕಾಲು ಪಾಲು ನೀರಿನಿಂದಲೇ ತುಂಬಿದೆ, (ಅಂದರೆ ಸರಿಸುಮಾರು ಶೇ.70ರಷ್ಟು ಪ್ರಮಾಣ). ನಮ್ಮ ಎಲ್ಲಾ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರಮುಖ ಆಹಾರ ಪದಾರ್ಥಗಳಲ್ಲಿ ನೀರು ಪ್ರಮುಖವಾದದ್ದು. ಸಾಮಾನ್ಯವಾಗಿ ಬಾಯಾರಿಕೆ ಆದ ಕೂಡಲೇ ಹೋಗಿ ನೀರು ಕುಡಿಯುತ್ತೇವೆ. ಯಾಕೆಂದರೆ ದೇಹದಲ್ಲಿ ನೀರಿನಾಂಶವು ಕಡಿಮೆ ಆಗುತ್ತಿದೆ ಎಂದು ಬಾಯಾರಿಕೆಯು ಸೂಚಿಸುತ್ತದೆ. ಹೀಗಾಗಿ ನೀರು ನಮ್ಮ ದೈನಂದಿನ ಬದುಕಿನಲ್ಲಿ ಬೇಕಾಗುವಂತಹ ಪ್ರಮುಖ ದ್ರವ.

ಆರೋಗ್ಯ ತಜ್ಞರ ಪ್ರಕಾರ, ನಾವು ದಿನನಿತ್ಯ ಕನಿಷ್ಠ ಪಕ್ಷ ಎಂದರೂ, ಒಂದೆರಡು ಲೀಟರ್ ನೀರು ಕುಡಿಯಲೇಬೇಕು. ಅಲ್ಲದೇ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ನಿರ್ಜಲೀಕರಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾಗಿ, ನೀರು ಕುಡಿಯದೇ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಎಂದು ಆಹಾರ ತಜ್ಞರು ಆತಂಕ ವ್ಯಕ್ತ ಪಡಿಸುತ್ತಾರೆ. ಇಂದಿನ ಲೇಖನದಲ್ಲಿ ನೀರು ಕುಡಿಯುವಾಗ ವಹಿಸಬೇಕಾದ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಮಾಡಬಾರದ ತಪ್ಪುಗಳನ್ನು ತಿಳಿಸಿಕೊಳ್ಳಲಾಗಿದೆ, ಮುಂದೆ ಓದಿ..

ಇದೇ ಕಾರಣಕ್ಕೆ ಕುಳಿತುಕೊಂಡು ನೀರು ಕುಡಿಯಬೇಕು

  • ನಿಮಗೆ ನೆನಪಿರಬಹದು, ಮನೆಯಲ್ಲಿ ಹಿರಿಯರು ಕೆಲವೊಮ್ಮೆ ಹೇಳುತ್ತಾ ಇರುತ್ತಾರೆ, ಅದು ಏನೆಂದರೆ, ನಾವು ಆಹಾರಪದಾರ್ಥಗಳನ್ನು ಸೇವನೆ ಮಾಡುವಾಗ ಅಥವಾ ಬಾಯಾರಿಕೆ ಆದಾಗ ನೀರು ಕುಡಿಯುವಾಗ, ತಪ್ಪಿಯೂ ನಿಂತುಕೊಂಡು ತಿನ್ನಬಾರದು ಅಥವಾ ಕುಡಿಯಬಾರದು ಎಂದು. ಆರೋಗ್ಯದ ವಿಷಯದಲ್ಲಿ ಅಕ್ಷರಶ: ಸತ್ಯ
  • ಯಾಕೆಂದರೆ, ಈ ವಿಷ್ಯವನ್ನು ವೈಜ್ಞಾನಿಕವಾಗಿ ನೋಡುವುದಾದರೆ, ನಮ್ಮ ದೇಹದಲ್ಲಿ ನೀರಿನಾಂಶ ಹಾಗೂ ಎಲೆಕ್ಟ್ರೋಲೈಟ್ ಅಂಶಗಳು, ಸಮತೋಲನ ಆಗುವುದರ ಜೊತೆಗೆ ನಮ್ಮ ಕೀಲುಗಳಲ್ಲಿ ಮತ್ತು ಮೂಳೆಗಳಲ್ಲಿ ಸಂಧಿವಾತ ಸಮಸ್ಯೆ ಕಂಡು ಬರದಂತೆ ಆಗುತ್ತದೆ. ಹಾಗಾಗಿ ಯಾವಾಗಲೂ ಕುಳಿತುಕೊಂಡು ನೀರು ಕುಡಿಯುವ ಹಾಗೂ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು

ಆಯುರ್ವೇದ ಶಾಸ್ತ್ರದ ಪ್ರಕಾರ ಒಮ್ಮೆಲೇ ಗಟಗಟನೇ ನೀರು ಕುಡಿಯಬಾರದು 

  • ಹೌದು, ಬಾಯಾರಿಕೆ ಆದಾಗ ಒಮ್ಮಲೇ, ಗಟಗಟನೇ ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬಾರದು. ಆಯುರ್ವೇದ ಶಾಸ್ತ್ರದ ಪ್ರಕಾರ, ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಸ್ವಲ್ಪವೇ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  • ಇನ್ನು ಊಟ ಮಾಡುವ ಸಂದರ್ಭದಲ್ಲಿ ಅಥವಾ ಬಾಯಾರಿಕೆ ಆದ ಸಂದರ್ಭದಲ್ಲಿ, ಒಮ್ಮೆಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬಾರದು, ಇದರಿಂದ ನಮ್ಮ ದೇಹದ ವಾತ, ಕಫ ಮತ್ತು ಪಿತ್ತ ದೋಷಗಳ ಸಮತೋಲನ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ.

ತುಂಬಾ ತಣ್ಣಗಿನ ಮತ್ತು ಹೆಚ್ಚು ಬಿಸಿ ಇರುವ ನೀರನ್ನು ಕುಡಿಯಬೇಡಿ 

  • ಸಾಮಾನ್ಯವಾಗಿ ತುಂಬಾನೇ ಬಾಯಾರಿಕೆ ಆದಾಗ ಅಥವಾ ಬಿಸಿಲಿಗೆ ಹೊರಗಡೆ ಹೋಗಿ ಬಂದಾಗ, ಫ್ರಿಡ್ಜ್‌ನಲ್ಲಿರುವ ತಂಪಾದ ನೀರು ಕುಡಿಯಬೇಕು ಎಂದೆನಿಸುತ್ತದೆ. ಇನ್ನು ಕೆಲವರಿಗೆ ಸುಡುವ ಬಿಸಿಬಿಸಿ ನೀರು ಕುಡಿಯಬೇಕು ಎಂದೆನಿಸುತ್ತದೆ! ಆದರೆ ಆಯುರ್ವೇದ ಶಾಸ್ತ್ರದ ಪ್ರಕಾರ ಇವೆರಡೂ ಆರೋಗ್ಯಕ್ಕೆ ತುಂಬಾನೇ ಡೇಂಜರ್ ಅಂತೆ
  • ಹಾಗಾಗಿ ನಾರ್ಮಲ್ ಆಗಿ ತಣ್ಣಗಿರುವ ನೀರನ್ನು ಮಾತ್ರ ಕುಡಿಯುವುದು ಒಳ್ಳೆಯದು. ಇಲ್ಲಾಂದ್ರೆ ನೀರನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಂಡು ಕುಡಿಯಬಹುದು. ಇದರಿಂದಾಗಿ ನಮ್ಮ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆ ಮತ್ತು ಮೆಟಬಾಲಿಸಂ ಪ್ರಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯ ಮತ್ತು ನಮ್ಮ ದೇಹ ಕೂಡ ಸ್ವಚ್ಛವಾಗುತ್ತದೆ.

ಬೆಳಗ್ಗೆ ಬೆಡ್ ಕಾಫಿ ಬೇಡ, ಒಂದು ಲೋಟ ನೀರು ಕುಡಿಯಿರಿ 

ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವುದು, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಹಾಗಾಗಿ ಖಾಲಿ ಹೊಟ್ಟೆಗೆ ಟೀ-ಕಾಫಿಕುಡಿಯುವ ಬದಲು, ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಮಿಶ್ರಮಾಡಿ ಸೇವನೆ ಮಾಡಬೇಕು. ಇದರಿಂದ ದೇಹದ ವಿಷಕಾರಿ ಅಂಶಗಳು ದೂರವಾಗಿ, ಜೀರ್ಣಕ್ರಿಯೆ ಕೂಡ ಸರಾಗವಾಗಿ ನಡೆಯಲು ಸಹಾಯವಾಗುತ್ತದೆ.

ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ!!

  • ಆಯುರ್ವೇದ ಶಾಸ್ತ್ರದ ಪ್ರಕಾರ, ನಮಗೆ ಅವಶ್ಯಕತೆ ಇರುವಾಗ ಮಾತ್ರ ನೀರು ಕುಡಿಯಬೇಕಂತೆ! ಅಂದರೆ ಹೆಚ್ಚಿನ ಖಾರದ ಆಹಾರ ಪದಾರ್ಥಗಳನ್ನು ತಿಂದಾಗ ಅಥವಾ ಅಥವಾ ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಬೇಕು.
  • ಏಕೆಂದರೆ ಈ ಸಮಯದಲ್ಲಿ ನಮ್ಮ ಮೆದುಳು ನೀರು ಸೇವನೆ ಮಾಡಲು ನಮ್ಮ ದೇಹಕ್ಕೆ ಸೂಚನೆ ಕೊಡುತ್ತದೆ. ಹಾಗಾಗಿ ಇದಕ್ಕೆ ತಕ್ಕಂತೆ ನಡೆದುಕೊಂಡರೆ ನಮ್ಮ ದಿನದ ಅಗತ್ಯತೆಗೆ ತಕ್ಕಂತೆ ನಮ್ಮ ದೇಹಕ್ಕೆ ನೀರಿನ ಅಂಶ ಸೇರುತ್ತದೆ. ಅತಿಯಾಗಿ ನಮ್ಮ ದೇಹಕ್ಕೆ ನೀರಿನ ಅಂಶವನ್ನು ಸೇರಿಸುವುದು ಕೂಡ ಅಪಾಯಕಾರಿ ಎಂಬುದನ್ನು ಮರೆಯಬೇಡಿ.

As Per The Ayurveda Experts, Know Healthiest Way To Drink Water.